ಅಳಬೇಡ ತಂಗಿ ಅಳಬೇಡ
ಶರೀಫರು ಒಮ್ಮೆ ತಮ್ಮ ಊರಿನಲ್ಲಿ ನಡೆದು ಹೋಗುತ್ತಿದ್ದಾಗ, ಅದೇ ಮದುವೆಯಾದ ಹುಡುಗಿಯನ್ನು ಗಂಡನ ಮನೆಗೆ ಕಳಸಿ ಕೊಡುತ್ತಿರುವ ನೋಟವನ್ನು ನೋಡಿದರು. ಶರೀಫರ ಕಾಲದಲ್ಲಿ ಬಾಲ್ಯವಿವಾಹಗಳೇ ನಡೆಯುತ್ತಿದ್ದವು. ಹೀಗಾಗಿ, ಗಂಡನ ಮನೆಗೆ ಹೋಗುತ್ತಿರುವ ಹುಡುಗಿ ಅಳುವದು ಸಾಮಾನ್ಯ ದೃಶ್ಯವಾಗಿತ್ತು.ಆಗ ಶರೀಫರ ಬಾಯಿಂದ ಹೊರಹೊಮ್ಮಿದ ಹಾಡು: 
ಶರೀಫರು ಹೇಳುವುದು, ವಿವಾಹ ಮಾಯೆಯ ಮರ; ಮಾಯೆಯ ಬಳಗ (ಮಿಂಡೇರ ಬಳಗವು) ಅದರ ಜೊತೆಯಲ್ಲಿ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸುವ ಕಾಯಕದ ಮುಂದಿನ ಜೀವನ; ೮-೯ ವರ್ಷದ ಹೆಣ್ನು ಮಗು ಗಂಡನ ಮನೆಗೆ ನೂಕುತ್ತಿದ್ದಾರೆ-ಎಷ್ಟು ಅತ್ತರೂ ಉಳುಹಿಕೊಂಬುವರಿಲ್ಲ; ಮುಂದೆ ಪ್ರಾಪಂಚಿಕ ಸುಖ ಇದೆ. ನಿನಗೆ ಸಂಸಾರದಿಂದ ಬಿಡುಗಡೆ ಇಲ್ಲ. ಹಾಗಾಗಿ ವಿರಾಗಿ ಶರೀಫರ ಮಾತು, 'ಶಿಶುನಾಳಧೀಶನ ಅಂಗಳಕ ನೀ ಹೊರತಾದೆವ್ವ ಗೌರಿ'. 
ಅಳಬೇಡ ತಂಗಿ ಅಳಬೇಡ.
ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪಲ್ಲ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತs
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ ||೩|| ಶಿಶುನಾಳ ಶರೀಫರ ಗೀತೆಗಳು.ಸಲ್ಲಾಪ

ನೋಡಿ
ಶರೀಫ ಸಾಹಿತ್ಯ
ಉಲ್ಲೇಖ
ಶಿಶುನಾಳ ಶರೀಫರ ಪದಗಳು -ಅನಾಮಿಕ
ವರ್ಗ: ದಾಸ ಸಾಹಿತ್ಯವರ್ಗ:ಕನ್ನಡ ಸಾಹಿತ್ಯ